ಕನ್ನಡ ವ್ಯಾಕರಣ – ರಗಳೆ

ಕನ್ನಡ ವ್ಯಾಕರಣ – ರಗಳೆ
ಕನ್ನಡ ವ್ಯಾಕರಣ – ರಗಳೆ

ರಗಳೆ

ರಗಳೆ ಕನ್ನಡದ ವಿಶೇಷವಾದ ಪದ್ಯಜಾತಿ. ಪ್ರಸಿದ್ಧವಾದ ದೇಶೀಯ ಛಂದಸ್ಸು. ಇದನ್ನು ರಘಟಾ, ರಗಡಾ, ಪದ್ದಳಿ ಮುಂತಾದ ಹೆಸರಿನಿಂದ ಕರೆಯಲಾಗಿದೆ. ಈ ಪದ್ಯಜಾತಿಯಲ್ಲಿ ಲಲಿತರಗಳೆ, ಉತ್ಸಾಹರಗಳೆ, ಮಂದಾನಿಲರಗಳೆ ಎಂಬ ಮೂರು ಪ್ರಭೇದಗಳಿವೆ.

ಹಳಗನ್ನಡ ಕಾವ್ಯಗಳಲ್ಲಿ ಒಂದನೇ ನಾಗವರ್ಮನ “ಛಂದೋಂಬುಧಿ’ಯಲ್ಲಿ ಮೊದಲ ಬಾರಿಗೆ ಇದರ ಪ್ರಸ್ತಾಪ ಬಂದಿದೆ. ಜಯಕೀರ್ತಿಯು ತನ್ನ “ಛ೦ದೋನುಶಾಸನ’ದಲ್ಲಿ ಇದನ್ನು ರಘಟಾ ಎಂದು ಕರೆದಿದ್ದಾನೆ. ಅಲ್ಲದೇ ಗುಣಚ೦ದ್ರನ “ಛಂದಸ್ಸಾರ’ದಲ್ಲಿ “ರಗಳೆ’, “ರಘಟಾ’ ಎಂಬ ಪ್ರಸ್ತಾಪವೂ ಬಂದಿದೆ. ರಗಳೆಯ ಮೂಲ ಪ್ರಾಕೃತವೆಂದೂ, ಸಂಸ್ಕೃತವೆಂದೂ. ಕನ್ನಡ ಜನಪದದ ದೇಸೀಯ ಮೂಲದಿಂದ ಬಂದಿದೆ ಎಂದೂ ವಿದ್ವಾಂಸರಲ್ಲಿ ಜಿಜ್ಞಾಸೆ ಇದೆ.

ಕನ್ನಡದ ಮೊದಲ ಲಕ್ಷಣ ಗ್ರಂಥ “ಕವಿರಾಜಮಾರ್ಗ’ದಲ್ಲಿ ರಗಳೆಯ ಪಸ್ತಾಪವಿಲ್ಲ. ಆನ೦ತರದಲ್ಲಿ ಆದಿಕವಿ ಪಂಪನ “ಆದಿಪುರಾಣ’ ಮತ್ತು “ಪಂಪಭಾರತ’ದಲ್ಲಿ ರಗಳೆಯ ಬಳಕೆ ಇರುವುದನ್ನು ಗಮನಿಸಿದಾಗ ರಗಳೆಯು ಕವಿರಾಜಮಾರ್ಗಕಾರನ ಕಾಲ ಹಾಗೂ ಪಂಪನ ಕಾಲದ ಮಧ್ಯಭಾಗದ ಅವಧಿಯಲ್ಲಿ ರೂಪುತಳೆದಂತೆ ತೋರುತ್ತದೆ.

ಹರಿಹರನ ಮೂಲಕ ರಗಳೆ ಪುನರ್ಜನ್ಮ ಪಡೆಯಿತು. ರಗಳೆಯನ್ನು ಹರಿಹರ ಅತ್ಯಂತ ಸಮರ್ಪಕವಾಗಿ, ಸಮರ್ಥವಾಗಿ ಬಳಕೆ ಮಾಡಿದ್ದಾನೆ. ಹರಿಹರನ ಕಾವ್ಯಪ್ರತಿಭೆಯಲ್ಲಿ ರಗಳೆ ನದಿಯಂತೆ ಸುಳಿಯುತ್ತ. ಬಳುಕುತ್ತ, ಮೊರೆಯುತ್ತಾ ಕಾವ್ಯ ಸಂದರ್ಭಕ್ಕೆ ತಕ್ಕಂತೆ ರೂಪುತಳೆದಿರುವುದನ್ನು ಕಾಣಬಹುದಾಗಿದೆ.

ಹರಿಹರನ ಕೈಯಲ್ಲಿ ರಗಳೆಯು ನದಿಯಂತೆ, ಸುಳಿಯುತ್ತ ಮೊರೆಯುತ್ತ ಏಳುತ್ತ ಬೀಳುತ್ತ ಕನಲುತ್ತ ಕೊಬ್ಬುತ್ತ ಬಗೆ ಬಗೆಯ ಬೆಡಗಿನಿಂದ ಹರಿಯುತ್ತದೆ. ಅವನ ಸ್ಪೂರ್ತಿ ವಿಶೇಷವೂ ಭಕ್ತಿ ಪರವಶತೆಯೂ ಪ್ರತಿಭೆಯ ಸಂಚಾರವೂ ಅವನ ರಗಳೆಯನ್ನು ಇಚ್ಛೆ ಬಂದ ಹಾಗೆ ಕುಣಿಸುತ್ತದೆ ಎಂದು ವಿದ್ವಾಂಸರಾದ ಡಿ. ಎಲ್‌. ನರಸಿಂಹಾಚಾರ್‌ ಅವರು ಹರಿಹರನ ರಗಳೆಗಳ ವೈಭವವನ್ನು ಪ್ರಶಂಸಿಸಿದ್ದಾರೆ.

ಭಾವನೆಗಳ ತೀವ್ರ ಅಭಿವ್ಯಕ್ತಿಗೆ ರಗಳೆ ಅತ್ಯುತ್ತಮ ಛಂದೋಮಾರ್ಗ. ಹರಿಹರನ ಭಕ್ತಿಯ ಆವೇಶಗಳು ಓತಪ್ರೋತವಾಗಿ ಧುಮ್ಮಕ್ವಲು “ರಗಳೆ” ತುಂಬ ಸಮರ್ಥ ಸಂವಹನ ಮಾಧ್ಯಮವಾಯಿತು. ಹೀಗಾಗಿ ಹಳಗನ್ನಡ ಕಾವ್ಯದಲ್ಲಿ ಅಲ್ಲಲ್ಲಿ ಮಿಂಚಿಮರೆಯಾಗುತ್ತಿದ್ದ ರಗಳೆ ಹರಿಹರನಲ್ಲಿ ಸಮಗ್ರ ಕಾವ್ಯವಾಗಿ ಮೈದಳೆಯಿತು.

ಹರಿಹರನ ನ೦ತರ ರಗಳೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮತ್ತೆ ಮರು ಹುಟ್ಟುಪಡೆಯಿತು. ಆಧುನಿಕ ಕನ್ನಡ ಸಾಹಿತ್ಯದಲ್ಲಿ “ಸರಳರಗಳೆ’ – “ಮಹಾಛಂದಸ್ಸು’ ಎಂದು ಪ್ರಸಿದ್ಧಿ ಪಡೆದಿದೆ. ಪ್ರಾಸ ನಿಯಮಗಳನ್ನು ತೊರೆದ ಲಲಿತರಗಳೆ ಇಂಗ್ಲಿಷ್‌ ಸಾಹಿತ್ಯದಲ್ಲಿರುವ ‘ಬ್ಲ್ಯಾಂಕ್‌ವರ್ಸ್‌'(blank verse) ಮಾದರಿಯಲ್ಲಿ ಆಧುನಿಕ ಕನ್ನಡ ನಾಟಕಗಳಲ್ಲಿ “ಸರಳರಗಳೆ’ಯಾಗಿ ಮೂಡಿ ಬಂದಿದೆ. ಕುವೆಂಪು ಅವರ ನಾಟಕ “ಚಿತ್ರಾಂಗದಾ’ ಮತ್ತು ಅವರ ಮಹಾಕಾವ್ಯ “ಶ್ರೀರಾಮಾಯಣ ದರ್ಶನಂ’ದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಕೆಯಾಗಿದೆ.

ಹೊಸಗನ್ನಡ ಕಾವ್ಯದಲ್ಲೂ ಕುವೆಂಪು ಈ ಪದ್ಯಜಾತಿಯನ್ನು ಕೆಲವು ಬದಲಾವಣೆಯ ಮೂಲಕ “ಸರಳ ರಗಳೆ’ಯೆಂದು ಕರೆದು ಮಹಾಕಾವ್ಯ ರಚನೆಗೆ ಬಳಸಿಕೊಂಡಿದ್ದಾರೆ.


‘ರಗಳೆ’ ಎಂಬುದು ‘ರಘಟಾ’ ಎಂಬ ಸಂಸ್ಕೃತ ಪದದ ತದ್ಭವರೂಪ.
ಕನ್ನಡದಲ್ಲಿ ಸಾಮಾನ್ಯವಾಗಿ ಮೂರು ವಿಧದ ರಗಳೆಗಳು ಪ್ರಸಿದ್ಧವಾಗಿವೆ.

  1. ಉತ್ಸಾಹ ರಗಳೆ,
  2. ಮಂದಾನಿಲ ರಗಳೆ ಮತ್ತು,
  3. ಲಲಿತ ರಗಳೆ

— ‘ರಗಳೆ’ಯಲ್ಲಿ ಇಂತಿಷ್ಟೇ ಸಾಲುಗಳು ಇರಬೇಕೆಂಬ ನಿಯಮವಿಲ್ಲ.
— ಆದರೆ ಎಲ್ಲಾ ಸಾಲುಗಳು ಸಮಾನವಾದ ಮಾತ್ರಾಗಣದಿಂದ ಕೂಡಿರುತ್ತವೆ.
ಎರಡೆರಡು ಸಾಲುಗಳಲ್ಲಿ ಪ್ರಾಸಗಳಿರುತ್ತವೆ.


1. ಉತ್ಸಾಹ ರಗಳೆ :

ಉತ್ಸಾಹ ರಗಳೆ
ಉತ್ಸಾಹ ರಗಳೆ

— ಈ ರಗಳೆಯಲ್ಲಿ ಪ್ರತಿ ಸಾಲಿನಲ್ಲೂ ಮೂರು ಮಾತ್ರೆಗಳ ನಾಲ್ಕು ಗಣಗಳುಂಟು
— ಮೊದಲೆರಡು ಸಾಲುಗಳಲ್ಲಿ ಆದಿ ಮತ್ತು ಅಂತ್ಯಪ್ರಾಸಗಳೂ
— ಮತ್ತೆರಡು ಸಾಲುಗಳಲ್ಲಿ ಅಂತ್ಯಪ್ರಾಸವೂ ಇರುವುದನ್ನು ಗಮನಿಸಬಹುದು.

ಸೂತ್ರ : ಎರಡೆರಡು ಸಾಲುಗಳಲ್ಲಿ ಪ್ರಾಸ ನಿಯಮವನ್ನಿಟ್ಟುಕೊಂಡು ಪ್ರತಿಪಾದದಲ್ಲೂ ಮೂರು ಮಾತ್ರೆಗಳ ನಾಲ್ಕುಗಣಗಳಿದ್ದು ಸಾಲುಗಳ ಸಂಖ್ಯಾನಿಯಮವಿಲ್ಲದೆ ಇರುವ ಪದ್ಯ ಜಾತಿಯೇ ಉತ್ಸಾಹ ರಗಳೆಯೆನಿಸುವುದು.

ಶಿಥಿಲದ್ವಿತ್ವ : ಒಂದು ಅಕ್ಷರವು ಸಂಯುಕ್ತಾಕ್ಷರವಾಗಿದ್ದರೆ (ಒತ್ತಕ್ಷರ) ಅಕ್ಷರವನ್ನು ತೇಲಿಸಿ ಉಚ್ಚರಿಸಿದಾಗ ಅಲ್ಲಿರುವ ಒತ್ತು ಶಿಥಿಲವಾಗುತ್ತದೆ ಇಂತಹ ಅಕ್ಷರವನ್ನೇ ಶಿಥಿಲದ್ವಿತ್ವಾಕ್ಷರ ಎಂದು ಕರೆಯುವುದು. ಮೇಲಿನ ಪದ್ಯದ ಮೊದಲ ಸಾಲಿನ ಮೊದಲ ಪದವಾದ ‘ಕುಳಿರ್ವ’ ಎಂಬಲ್ಲಿ ‘ರ್ವ’ ಎಂಬುದು ಒತ್ತಕ್ಷರವಾಗಿದೆ (ದ್ವಿತ್ವಾಕ್ಷರ). ನಿಯಮಾನುಸಾರ ಅದರ ಹಿಂದಿನ ಅಕ್ಷರ ‘ಳಿ’ ಎಂಬುದು ಗುರು ಎನಿಸಿಕೊಳ್ಳುತ್ತದೆ. ಆದರೆ ಇಲ್ಲಿರುವ ‘ರ್ವ’ ಅಕ್ಷರ ಶಿಥಿಲದ್ವಿತ್ವಾಕ್ಷರವಾದ ಕಾರಣ ಅಂದರೆ ‘ರ್ವ’ ಎಂಬ ಅಕ್ಷರವನ್ನು ತೇಲಿಸಿ ಉಚ್ಚರಿಸುವುದರಿಂದ ಇಲ್ಲಿ ಶಿಥಿಲದ್ವಿತ್ವ ಉಂಟಾಗಿ ‘ಳಿ’ ಎಂಬ ಅಕ್ಷರವು ಲಘು ಎನಿಸಿಕೊಳ್ಳುತ್ತದೆ.


2. ಮಂದಾನಿಲ ರಗಳೆ :

ಮಂದಾನಿಲ ರಗಳೆ
ಮಂದಾನಿಲ ರಗಳೆ

— ಈ ಪದ್ಯಭಾಗದಲ್ಲಿ ಪ್ರತಿಯೊಂದು ಪಾದದಲ್ಲೂ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿವೆ.
— ಮೊದಲೆರಡು ಸಾಲುಗಳಲ್ಲಿ ‘ಡ್’ ಎಂಬ ಪ್ರಾಸಾಕ್ಷರವೂ ಮತ್ತೆರೆಡು ಸಾಲುಗಳಲ್ಲಿ ‘ಖ್’ ಎಂಬ ಪ್ರಾಸಾಕ್ಷರವೂ ಆದಿಪ್ರಾಸವಾಗಿ ಬಂದಿವೆ.
— ಅದೇ ರೀತಿ ಎರಡೆರಡು ಸಾಲುಗಳಲ್ಲಿ ಅಂತ್ಯಪ್ರಾಸವೂ ಇದೆ.

ಸೂತ್ರ : ನಾಲ್ಕು ಮಾತ್ರೆಗಳ ನಾಲ್ಕು ಗಣಗಳು ಪ್ರತಿ ಪಾದದಲ್ಲೂ ಬಂದು ಎರಡೆರಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೆ ಮಂದಾನಿಲ ರಗಳೆಯೆನ್ನುವರು.


ಲಲಿತರಗಳೆ :

ಲಲಿತರಗಳೆ
ಲಲಿತರಗಳೆ

— ಇಲ್ಲಿಯೂ ಕೊನೆಯ ಸಾಲಿನಲ್ಲಿ ‘ಳ್ಗ’ ಎಂಬುದು ದ್ವಿತ್ವಾಕ್ಷರ (ಒತ್ತಕ್ಷರ) ಆಗಿದ್ದರು ಇಲ್ಲಿ ಶಿಥಿಲದ್ವಿತ್ವ ಇರುವುದರಿಂದಾಗಿ ಅದರ ಹಿಂದಿನ ಅಕ್ಷರ ಗು’ ಎಂಬುದು ಲಘುವಾಯಿತು.
— ಈ ಪದ್ಯದ ಪ್ರತಿಯೊಂದು ಸಾಲಿನಲ್ಲಿಯೂ ಐದು ಮಾತ್ರೆಗಳ ನಾಲ್ಕು ಗಣಗಳಿವೆ.
— ಎರಡೆರಡು ಸಾಲುಗಳಲ್ಲಿ ಪ್ರಾಸವಿದೆ.

ಸೂತ್ರ : ಪ್ರತಿ ಪಾದದಲ್ಲೂ ಐದೈದು ಮಾತ್ರೆಗಳ ನಾಲ್ಕು ಗಣಗಳಿದ್ದು ಎರಡೆರಡು ಸಾಲುಗಳಲ್ಲಿ ಪ್ರಾಸಗಳಿರುವಂತೆ ರಚಿಸಲ್ಪಟ್ಟ ರಗಳೆಯೇ ಲಲಿತರಗಳೆ.


Spread the Knowledge

You may also like...

4 Responses

  1. Sanjay HC says:

    ವಿಶ್ಲೇಷಣೆ ತುಂಬಾ ಸುಲಭ ಹಾಗಿ ಇದೆ. ಧನ್ಯವಾದಗಳು

  2. ಬಸವರಾಜ ಕಟ್ಟಿಕಾರ says:

    Super

  3. Sanjaya N says:

    super

Leave a Reply

Your email address will not be published. Required fields are marked *