ಹರಿಹರ ಕವಿ ಪರಿಚಯ

ಹರಿಹರ ಕವಿ

ಪರಿಚಯ

ಹರಿಹರನು ಕನ್ನಡ ಸಾಹಿತ್ಯದ ಅಪ್ರತಿಮ ಕವಿಗಳಲ್ಲಿ ಒಬ್ಬ, ಕನ್ನಡದಲ್ಲಿ ‘ರಗಳೆ’ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ.

ಪ್ರಸಿದ್ಧ ಕೃತಿ ಗಿರಿಜಾಕಲ್ಯಾಣ ಎಂಬ ಗ್ರಂಥದ ಕರ್ತೃ. ಅವನು 13ನೇ ಶತಮಾನದಲ್ಲಿ ಜೀವಿಸಿದ್ದನು, ಅವನ ಕಾವ್ಯವು ಹೆಚ್ಚಾಗಿ ಶೈವ ಮತ್ತು ವೀರಶೈವ ಧರ್ಮದ ತತ್ವಗಳನ್ನು ಪ್ರತಿಪಾದಿಸುತ್ತದೆ.

ಹರಿಹರನ ಕಾಲ

ಹರಿಹರನ ಕಾಲದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕೆಲವು ವಿದ್ವಾಂಸರು ಅವನು ಹೊಯ್ಸಳ ದೊರೆ ಎರಡನೆಯ ವೀರಬಲ್ಲಾಳನ (1173-1220) ಆಳ್ವಿಕೆಯಲ್ಲಿದ್ದ ಬಗೆಗಿನ ಒಂದು ಆಧಾರದಿಂದ ಅವನ ಕಾಲವನ್ನು ಸು. 1216 ಎಂದಿಟ್ಟುಕೊಳ್ಳುತ್ತಾರೆ.

ಹರಿಹರನ ಜೀವನ

ಹರಿಹರನ ಜನ್ಮಸ್ಥಳ ಹಂಪೆ. ಅವನ ತಂದೆ ಮಹದೇವ ಭಟ್ಟ ಮತ್ತು ತಾಯಿ ಶರ್ವಾಣಿ. ಅವನ ಗುರು ಮಾಯಿದೇವ / ಮಾದರಸ . ಹರಿಹರನ ತಂಗಿ ರುದ್ರಾಣಿ, ಕನ್ನಡದ ಇನ್ನೊಬ್ಬ ಪ್ರಸಿದ್ಧ ಕವಿ ರಾಘವಾಂಕನ ತಾಯಿ. ಹರಿಹರನು ತನ್ನ ಸೋದರಳಿಯ ರಾಘವಾಂಕನ ಗುರುವಾಗಿದ್ದನು.

ಹಂಪೆಯವನಾದ ಈತ ಪಂಪಾಕ್ಷೇತ್ರದ ವಿರೂಪಾಕ್ಷನ ಪರಮಭಕ್ತನಾಗಿ, ವೇದವೇದಾಂಗ ಪುರಾಣಾದಿ ವಿದ್ಯೆಗಳಲ್ಲಿ ಪಾರಂಗತನಾಗಿದ್ದನು.

ದ್ವಾರಸಮುದ್ರದ ಬಲ್ಲಾಳರಾಜನ ಆಸ್ಥಾನದಲ್ಲಿ ಈತ ಕರಣಿಕನಾಗಿ(ಲೆಕ್ಕಪತ್ರ, ಆಯವ್ಯಯ ಮುಂತಾದ ಹಣಕಾಸು ಸಂಬಂಧಿತ ದಾಖಲೆಗಳನ್ನು ನೋಡಿಕೊಳ್ಳುವ ಕೆಲಸಗಾರ / accountant) ಕೆಲಕಾಲ ಸೇವೆ ಕೈಕೊಂಡಿದ್ದ. ಬಲ್ಲಾಳನ ಮಂತ್ರಿ ಕೆರೆಯ ಪದ್ಮರಸನ ಸಂಪರ್ಕ ಈತನಿಗಿತ್ತು. ಹರಿಹರನು, ನರಸಿಂಹಬಲ್ಲಾಳನ ಆಸ್ಥಾನದಲ್ಲಿ ಕರಣಿಕನಾಗಿದ್ದ.

ಹರಿಹರನು ಒಬ್ಬ ಆತ್ಮಾಭಿಮಾನಿಯಾದ ಕವಿ.

ಪೋಗೆನೆ ಪೋಪ ಬಾರೆಲವೊ ಬಾರೆನೆ ಜೀಯ ಹಸಾದವೆಂದು ಬೆಳ್ಳಾಗುತೆ ಬರ್ಪ ಮಾಣೆಲವೊ ಸುಮ್ಮನಿರೆಂದೊಡೆ ಸುಮ್ಮನಿರ್ಪ ಮತ್ತಾಗಳೆ ಝಂಕಿಸಲ್ ನಡುಗಿ ಬೀಳುವ ಸೇವೆಯ ಕಷ್ಟವೃತ್ತಿಯಂ ನೀಗಿದೆನೆಂದು ನಿಮ್ಮ ದೆಸೆಯಿಂ ಕರುಣಾಕರ ಹಂಪೆಯಾಳ್ದನೆ ಎಂಬ ಮಾತುಗಳಿಂದ ಈತ ರಾಜಸೇವೆಯನ್ನು ಧಿಕ್ಕರಿಸಿದನೆಂದು ತಿಳಿದುಬರುತ್ತದೆ. ಹೀಗೆ ರಾಜಾಶ್ರಯ ವನ್ನು ತ್ಯಜಿಸಿದ ಅನಂತರ ಈತ ಹಂಪೆಗೆ ಮರಳಿ, ಅಲ್ಲಿಯೇ ನೆಲಸಿ ವಿರೂಪಾಕ್ಷನ ಅರ್ಚನೆ ಹಾಗೂ ಕಾವ್ಯ ರಚನೆಗಳಲ್ಲಿ ತಲ್ಲೀನನಾದಂತೆ ತೋರುತ್ತದೆ.

ಪದ್ಮಣಾಂಕ, ವಿರೂಪಾಕ್ಷ ಪಂಡಿತ, ಶಾಂತಲಿಂಗದೇಶಿಕ, ಸಿದ್ಧನಂಜೇಶ ಮೊದಲಾದವರು ತಮ್ಮ ಕಾವ್ಯಗಳಲ್ಲಿ ಹರಿಹರನಿಗೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ನಿರೂಪಿಸಿದ್ದಾರೆ. ರಾಘವಾಂಕನು ಹರಿಹರಮಹತ್ತ್ವ ಎಂಬ ಕೃತಿಯನ್ನು ಬರೆದಿದ್ದು, ಇದು ಹರಿಹರನ ಜೀವನ ಸಾಧನೆಗಳಿಗೆ ಸಂಬಂಧಿಸಿದ ಮಹತ್ತ್ವದ ಕೃತಿಯಾಗಿದ್ದಿರಬೇಕು. ಆದರೆ ದುರದೃಷ್ಟ ವಶಾತ್ ಈ ಗ್ರಂಥ ಉಪಲಬ್ಧವಿಲ್ಲ. ಆದರೆ ಆ ಗ್ರಂಥದ ಕೆಲವಂಶಗಳನ್ನು ಸಿದ್ಧನಂಜೇಶ ತನ್ನ ರಾಘವಾಂಕಚಾರಿತ್ರದಲ್ಲಿ ಕೆಲಮಟ್ಟಿಗೆ ನಿರೂಪಿಸಿದ್ದಾನೆ. ಈ ಎಲ್ಲ ಕೃತಿಗಳಿಂದ ಹರಿಹರನ ಜೀವನದ ಪೂರ್ವಾರ್ಧದ ಕೆಲವು ಘಟನೆಗಳು ತಿಳಿಯುತ್ತವೆಯಾದರೂ ಆತನ ಜೀವನದ ಉತ್ತರಾರ್ಧ ಹಾಗೂ ಅವನು ತನ್ನ ಕೊನೆಯ ದಿನಗಳನ್ನು ಹೇಗೆ ಕಳೆದ ಈ ಮೊದಲಾದ ಸಂಗತಿಗಳು ಸ್ಪಷ್ಟವಿಲ್ಲ.

ಹರಿಹರನ ಕಾವ್ಯ

ಹರಿಹರನ ಕಾವ್ಯದಲ್ಲಿ ಶೈವ ಭಕ್ತಿ ಮತ್ತು ವೈಷ್ಣವ ಭಕ್ತಿ ಎರಡೂ ಕಾಣಬರುತ್ತವೆ. ಆದರೆ, ಶೈವ ಭಕ್ತಿ ಈತನ ಕಾವ್ಯದಲ್ಲಿ ಪ್ರಧಾನವಾಗಿದೆ.

ಹರಿಹರನ ಕಾವ್ಯದಲ್ಲಿ ಶಿವಶರಣರ ಕಥೆಗಳು ಪ್ರಮುಖವಾಗಿವೆ. ಈತ ರಚಿಸಿದ ಶಿವಶರಣರ ರಗಳೆಗಳು ಕನ್ನಡ ಸಾಹಿತ್ಯದಲ್ಲಿ ಅಮೂಲ್ಯ ಕೃತಿಗಳಾಗಿವೆ.

ಈತ “ರಗಳೆಗಳ ಕವಿ” ಎಂದೆ ಪ್ರಸಿದ್ಧನಾಗಿದ್ದಾನೆ. ಹನ್ನೆರಡನೆಯ ಶತಮಾನದ ಬಹು ಮಹತ್ವದ ಶರಣ ಚಳವಳಿ ಮತ್ತು ವಚನ ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ. ಮೂಲತಃ ಆತನು ಭಕ್ತ ಕವಿ. ಆತನ ಕಾವ್ಯದ ತುಂಬ ಭಕ್ತಿಯು ಓತಪ್ರೋತವಾಗಿ ಹರಿದಿದೆ. ಹರಿಹರನ ಎರಡೂ ಶತಕಗಳಲ್ಲಿ ಆತನು ಹಂಪೆಯ ಶ್ರೀ ವಿರೂಪಾಕ್ಷನಲ್ಲಿ ತಳೆದಿರುವ ಭಕ್ತಿಯು ಎದ್ದು ಕಾಣುತ್ತದೆ. ಅಂತೆಯೇ ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ.

ಹರಿಹರನ ಶತಕದ್ವಯವು ಪ್ರಮುಖವಾಗಿ ಆತನ ಆತ್ಮಕಥನಗಳೇ ಆಗಿವೆ.

ಗಿರಿಜಾ ಕಲ್ಯಾಣವು ಹರಿಹರನ ಮಹೋನ್ನತ ಚಂಪೂ ಕಾವ್ಯವಾಗಿದೆ. ಆವರೆಗಿನ ಕನ್ನಡ ಚಂಪೂ ಕೃತಿಗಳಲ್ಲಿ ಕಾಣದ ಕಥಾ ವಿಷಯವು ಇಲ್ಲಿದೆ. ಇದರಲ್ಲಿ ಹತ್ತು ಆಶ್ವಾಸಗಳಿವೆ. ಕಾಳಿದಾಸ ಕವಿಯ ಕುಮಾರಸಂಭವ ಈ ಕಾವ್ಯಕ್ಕೆ ಮೂಲ ಸಾಮಗ್ರಿ. ಆ ಕಥಾವಸ್ತುವಿನಲ್ಲಿ ಹರಿಹರ ಹೊಸ ಅರ್ಥ ಹೊರ ಹೊಮ್ಮುವಂತೆ ನವೀನ ದೃಷ್ಟಿಯ ಕಾವ್ಯವನ್ನು ರಚಿಸಿದ್ದಾನೆ. ಕಾವ್ಯದ ಹೆಸರೇ ಸೂಚಿಸುವಂತೆ, ಶೈವ ಪುರಾಣ ಗಳಲ್ಲಿ ಕಂಡು ಬರುವ ಶಿವಪಾವ೯ತಿಯರ ವಿವಾಹದ ಕಥೆ ಗಿರಿಜಾ ಕಲ್ಯಾಣದ ವಸ್ತು. ಗಿರಿಜೆಯ ಜನನದಿಂದ ಶಿವನೊಡನೆ ಅವಳ ವಿವಾಹದವರೆಗೆ ಮನೋಜ್ಞವಾಗಿ ಅವಳ ಸೌಂದಯ೯, ಸೊಬಗು, ಭಕ್ತಿಯ ಕಠೋರತೆ ಇವುಗಳನ್ನು ಸೂಕ್ಷ್ಮವಾಗಿ ಕವಿಯು ಚಿತ್ರಿಸಿದ್ದಾನೆ.

ಹರನು ಪುರುಷ; ಗಿರಿಜೆ ಪ್ರಕೃತಿ. ಪ್ರಕೃತಿ-ಪುರುಷರ ಮಿಲನದಿಂದ ಲೋಕಕಲ್ಯಾಣ ಎಂಬ ಉದಾತ್ತದೃಷ್ಟಿ ಈ ಕಾವ್ಯದಲ್ಲಿ ಮೂಡಿಬಂದಿದೆ. ಈ ಕಾವ್ಯ ಪಾಂಡಿತ್ಯಪೂರ್ಣವಾಗಿದೆ; ರಸವತ್ತಾಗಿದೆ. ಸಂಭಾಷಣೆಯ ಶೈಲಿ ಕಾವ್ಯಕ್ಕೆ ನಾಟಕೀಯ ಕಳೆ ತಂದಿದೆ. ಗದ್ಯವನ್ನು ಹೊಸ ಧಾಟಿಯಲ್ಲಿ ಬಳಸಲಾಗಿದೆ. ಕಂದಗಳು ಅರ್ಥವತ್ತಾಗಿ ಸ್ವಚ್ಛಂದವಾಗಿ ಹರಿದು ಬಂದಿವೆ. ಪಾರ್ವತಿಯ ಬಾಲ್ಯ, ಶಿವಭಕ್ತಿ, ಸೌಂದರ್ಯಗಳು, ಕಾಮದಹನ, ರತಿವಿಲಾಪ, ಋತುಗಳು, ಉಗ್ರತಪಸ್ಸು, ವಟುವೇಷದ ಶಿವ, ಹರಗಿರಿಜೆ ಯರ ವಿವಾಹ-ಈ ವರ್ಣನೆಗಳು ಸುಂದರವೂ ಪರಿಣಾಮಕಾರಿಯೂ ಆಗಿವೆ. ಶೃಂಗಾರ, ಕರುಣ, ಭಕ್ತಿಭಾವಗಳು ಮನೋಹರವಾಗಿ ಚಿತ್ರಿತ ವಾಗಿವೆ.

ಹರಿಹರನ ಹೆಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ತ್ವದ ಸ್ಥಾನಗಳಿಸಿರುವುದು ಈತ ರಚಿಸಿರುವ ರಗಳೆ ಕಾವ್ಯಗಳ ಮೂಲಕ. ಶಿವನನ್ನು, ಶಿವಶರಣರನ್ನು ಸ್ತುತಿಸಲು ಮಾತ್ರ ಕಾವ್ಯಶಕ್ತಿಯನ್ನು ಬಳಸಬೇಕಲ್ಲದೆ ಮಾನವರನ್ನು ಹೊಗಳಲು ಅಲ್ಲವೆಂಬ ಸಂಪ್ರದಾಯ ವನ್ನು ಕನ್ನಡ ಸಾಹಿತ್ಯದಲ್ಲಿ ರೂಢಿಗೆ ತಂದ ಈತ. ಹಳಗನ್ನಡ ಭಾಷೆಯಲ್ಲಿ ಪ್ರಾಸದ ಬಗೆಗಿದ್ದ ಮೂರು ಬಗೆಯ ಳಕಾರಗಳಿಗೆ ಪ್ರತಿಯಾಗಿ ಒಂದನ್ನೇ ರೂಢಿಸುವ ದಿಟ್ಟತನವನ್ನೂ ಈತ ತೋರಿದ. ಅದುವರೆಗೆ ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾಗಿದ್ದ ಚಂಪೂ ಕಾವ್ಯಪರಂಪರೆಯನ್ನು ಹಿಂದೆ ಸರಿಸಿ ರಗಳೆಗಳಲ್ಲಿ ಕಾವ್ಯ ರಚಿಸುವ ಹೊಸ ಸಂಪ್ರದಾಯಕ್ಕೆ ಅಸ್ತಿಬಾರ ಹಾಕಿದ. ತಮಿಳು ದೇಶದ ಅರವತ್ತು ಮೂವರು ಪುರಾತನರ, ಬಸವಣ್ಣ, ದೇವರದಾಸಿಮಯ್ಯ, ಪ್ರಭುದೇವ ಮುಂತಾದ ಶಿವಶರಣರ, ಅಲ್ಲದೆ ಸ್ತೋತ್ರ, ಆತ್ಮನಿವೇದನ ರೂಪವಾದ ನೂರಾರು ರಗಳೆಗಳನ್ನು ಈತ ರಚಿಸಿದ್ದಾನೆ. ಈ ರಗಳೆಗಳ ಸಂಖ್ಯೆಯ ಬಗೆಗೆ ಭಿನ್ನಾಭಿಪ್ರಾಯ ಗಳಿವೆ. ಸದ್ಯಕ್ಕೆ 106 ರಗಳೆಗಳನ್ನು ರಚಿಸಿದ್ದಾನೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಹರಿಹರನ ರಗಳೆಗಳಲ್ಲೆಲ್ಲ ಬಸವರಾಜದೇವರ ರಗಳೆ ಮತ್ತು ನಂಬಿಯಣ್ಣ ರಗಳೆ ಮಹತ್ವದ ಕೃತಿಗಳೆಂಬ ಮನ್ನಣೆಗೆ ಪಾತ್ರವಾಗಿವೆ.

ಈತ ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ ಎಂಬ ಕೃತಿಗಳನ್ನೂ ರಚಿಸಿದ್ದಾನೆ. ಪಂಪಾಶತಕ 103 ವೃತ್ತಗಳನ್ನುಳ್ಳ ಭಕ್ತಿವೈರಾಗ್ಯನೀತಿಗಳನ್ನು ಬೋಧಿಸುವ ಗ್ರಂಥ. ಬೇಲೂರಿನಿಂದ ಹಂಪೆಗೆ ಹೋಗುವಾಗ ಹರಿಹರ ಈ ಶತಕವನ್ನು ಹಾಡುತ್ತ ಹೋದನೆಂದು ಪ್ರತೀತಿ. ಭಕ್ತಿಯ ಸ್ತೋತ್ರ ಈ ಕಾವ್ಯದಲ್ಲಿ ಧಾರೆಯಾಗಿ ಹರಿದಿದೆ. ರಕ್ಷಾಶತಕ 101 ವೃತ್ತಗಳನ್ನುಳ್ಳ ಗ್ರಂಥ. ಇದರಲ್ಲಿಯೂ ತಾತ್ತ್ವಿಕ ವಿಷಯಗಳನ್ನು ನಿರೂಪಿಸಲಾಗಿದೆ. ಈ ಎರಡೂ ಕೃತಿಗಳಲ್ಲಿ ಭಕ್ತಿಭಾವದ ಗತಿಶೀಲತೆಯನ್ನು ಸುಂದರವಾಗಿ ನಿರೂಪಿಸಲಾಗಿದೆ. ಮುಡಿಗೆಯ ಅಷ್ಟಕ 8 ವೃತ್ತಿಗಳಿಂದ ಕೂಡಿದ ಚಿಕ್ಕ ಕೃತಿ. ಶಿವಪಾರಮ್ಯವನ್ನು ಸಾರುವುದೇ ಈ ಗ್ರಂಥದ ಉದ್ದೇಶ.

ಹೊಸ ಕಾವ್ಯಸಂಪ್ರದಾಯವನ್ನು ನಿರ್ಮಿಸಿ, ಅನೇಕ ಕೃತಿಗಳನ್ನು ರಚಿಸಿ, ಭಕ್ತಿಕವಿ ಎಂಬ ಖ್ಯಾತಿಗೆ ಪಾತ್ರನಾದ ಹರಿಹರ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾನೆ. ಆದರೆ ಈತ ನಿರ್ಮಿಸಿದ ರಗಳೆ ಕಾವ್ಯಸಂಪ್ರದಾಯ, ಈತನ ಅನಂತರ ಚಾಲನೆಗೊಳ್ಳದೆ ಕನ್ನಡ ಸಾಹಿತ್ಯದಲ್ಲಿ ಒಂದು ದ್ವೀಪವಾಗಿ ಉಳಿದದ್ದು ಮಾತ್ರ ಆಶ್ಚರ್ಯಕರ ಸಂಗತಿಯಾಗಿದೆ.

ಹರಿಹರನ ಪ್ರಮುಖ ಕೃತಿಗಳು

  • ಗಿರಿಜಾಕಲ್ಯಾಣ (ಚಂಪೂಕಾವ್ಯ)
  • ಪಂಪಾಶತಕ (ಶತಕ)
  • ರಕ್ಷಾಶತಕ (ಶತಕ)
  • ಮುಡಿಗೆಯ ಅಷ್ಟಕ (ಅಷ್ಟಕ)
  • ಶಿವ ಶರಣರ ರಗಳೆಗಳನ್ನೂ ರಚಿಸಿದ್ದಾರೆ.ಇವುಗಳಲ್ಲಿ ಅರುವತ್ತಮೂರು ಪುರಾತನರು ಶಿವ ಶರಣರ ರಗಳೆಗಳು ಇವೆ.

ಹರಿಹರನ ರಗಳೆಗಳು

ಹರಿಹರನ ರಗಳೆಗಳಂತೂ ಆತನ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರಗೊಳಿಸಿರುವ ಅಮರ ಕೃತಿಗಳು. ಹರಿಹರನ ನೈಜಪ್ರತಿಭೆಯು ಇಲ್ಲಿ ಗೋಚರಿಸುತ್ತದೆ. ಅವನ ರಗಳೆಗಳ ಸಂಖ್ಯೆಗಳ ಬಗ್ಗೆ ಗೊಂದಲವಿದೆಯಾದರೂ, ಅವುಗಳ ಸಂಖ್ಯೆಯು 106 ಎಂದು ಬಹುತೇಕರ ಅಭಿಪ್ರಾಯವಾಗಿದೆ. ವಿವಿಧ ಗಾತ್ರದ, ಬೇರೆ ಬೇರೆ ಶಿವಶರಣರ ಕಥೆಗಳನ್ನು ಈ ರಗಳೆಗಳಲ್ಲಿ ಹೇಳಲಾಗಿದೆ. ಮುಖ್ಯವಾಗಿ 63 ಪುರಾತನರ, ಅಂದರೆ ತಮಿಳಿನ ‘ಪೆರಿಯ ಪುರಾಣ’ದಲ್ಲಿ ಹೇಳಲಾಗಿರುವ 63 ಶಿವಭಕ್ತರ ಕಥೆಗಳು ಇಲ್ಲಿವೆ.

  1. ಬಸವರಾಜದೇವರ ರಗಳೆ,
  2. ತಿರುನೀಲಕಂಠದೇವರ ರಗಳೆ,
  3. ನಂಬಿಯಣ್ಣನ ರಗಳೆ,
  4. ಮಹಾದೇವಿಯಕ್ಕನ ರಗಳೆ,
  5. ಪ್ರಭುದೇವರ ರಗಳೆ,
  6. ಕುಂಬಾರ ಗುಂಡಯ್ಯನ ರಗಳೆ,
  7. ಮಾದಾರ ಚೆನ್ನಯ್ಯ’ನ ರಗಳೆ
  8. ಇಳೆಯಾಂಡ ಗುಡಿಮಾರ’ನ ರಗಳೆ ಮತ್ತು
  9. ರೇವಣಸಿದ್ಧೇಶ್ವರ ರಗಳೆಗಳು

ಹರಿಹರನ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಅಮೂಲ್ಯ ಕೊಡುಗೆಗಳಾಗಿವೆ. ಈತನ ಕೃತಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಅತ್ಯಗತ್ಯವಾದ ಕೊಡುಗೆಗಳನ್ನು ನೀಡಿವೆ.


reference credit :


ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಹರಿಹರ (ಕವಿ) – ವಿಕಿಪೀಡಿಯ

Spread the Knowledge

You may also like...

1 Response

  1. Sinchu says:

    Thank you for give information

Leave a Reply

Your email address will not be published. Required fields are marked *