ರಗಳೆ ಸಾಹಿತ್ಯ ಪ್ರಕಾರ

ರಗಳೆ ಸಾಹಿತ್ಯ ಪ್ರಕಾರ
ರಗಳೆ ಸಾಹಿತ್ಯ ಪ್ರಕಾರ

ರಗಳೆ ಕನ್ನಡದ ವಿಶೇಷವಾದ ಪದ್ಯಜಾತಿ. ಪ್ರಸಿದ್ಧವಾದ ದೇಶೀಯ ಛಂದಸ್ಸು. ಇದನ್ನು ರಘಟಾ, ರಗಡಾ, ಪದ್ದಳಿ ಮುಂತಾದ ಹೆಸರಿನಿಂದ ಕರೆಯಲಾಗಿದೆ. ಈ ಪದ್ಯಜಾತಿಯಲ್ಲಿ ಲಲಿತರಗಳೆ, ಉತ್ಸಾಹರಗಳೆ, ಮಂದಾನಿಲರಗಳೆ ಎಂಬ ಮೂರು ಪ್ರಭೇದಗಳಿವೆ.

ಹಳಗನ್ನಡ ಕಾವ್ಯಗಳಲ್ಲಿ ಒಂದನೇ ನಾಗವರ್ಮನ “ಛಂದೋಂಬುಧಿ’ಯಲ್ಲಿ ಮೊದಲ ಬಾರಿಗೆ ಇದರ ಪ್ರಸ್ತಾಪ ಬಂದಿದೆ. ಜಯಕೀರ್ತಿಯು ತನ್ನ “ಛ೦ದೋನುಶಾಸನ’ದಲ್ಲಿ ಇದನ್ನು ರಘಟಾ ಎಂದು ಕರೆದಿದ್ದಾನೆ. ಅಲ್ಲದೇ ಗುಣಚ೦ದ್ರನ “ಛಂದಸ್ಸಾರ’ದಲ್ಲಿ “ರಗಳೆ’, “ರಘಟಾ’ ಎಂಬ ಪ್ರಸ್ತಾಪವೂ ಬಂದಿದೆ. ರಗಳೆಯ ಮೂಲ ಪ್ರಾಕೃತವೆಂದೂ, ಸಂಸ್ಕೃತವೆಂದೂ. ಕನ್ನಡ ಜನಪದದ ದೇಸೀಯ ಮೂಲದಿಂದ ಬಂದಿದೆ ಎಂದೂ ವಿದ್ವಾಂಸರಲ್ಲಿ ಜಿಜ್ಞಾಸೆ ಇದೆ.

ಕನ್ನಡದ ಮೊದಲ ಲಕ್ಷಣ ಗ್ರಂಥ “ಕವಿರಾಜಮಾರ್ಗ’ದಲ್ಲಿ ರಗಳೆಯ ಪಸ್ತಾಪವಿಲ್ಲ. ಆನ೦ತರದಲ್ಲಿ ಆದಿಕವಿ ಪಂಪನ “ಆದಿಪುರಾಣ’ ಮತ್ತು “ಪಂಪಭಾರತ’ದಲ್ಲಿ ರಗಳೆಯ ಬಳಕೆ ಇರುವುದನ್ನು ಗಮನಿಸಿದಾಗ ರಗಳೆಯು ಕವಿರಾಜಮಾರ್ಗಕಾರನ ಕಾಲ ಹಾಗೂ ಪಂಪನ ಕಾಲದ ಮಧ್ಯಭಾಗದ ಅವಧಿಯಲ್ಲಿ ರೂಪುತಳೆದಂತೆ ತೋರುತ್ತದೆ.

ಹರಿಹರನ ಮೂಲಕ ರಗಳೆ ಪುನರ್ಜನ್ಮ ಪಡೆಯಿತು. ರಗಳೆಯನ್ನು ಹರಿಹರ ಅತ್ಯಂತ ಸಮರ್ಪಕವಾಗಿ, ಸಮರ್ಥವಾಗಿ ಬಳಕೆ ಮಾಡಿದ್ದಾನೆ. ಹರಿಹರನ ಕಾವ್ಯಪ್ರತಿಭೆಯಲ್ಲಿ ರಗಳೆ ನದಿಯಂತೆ ಸುಳಿಯುತ್ತ. ಬಳುಕುತ್ತ, ಮೊರೆಯುತ್ತಾ ಕಾವ್ಯ ಸಂದರ್ಭಕ್ಕೆ ತಕ್ಕಂತೆ ರೂಪುತಳೆದಿರುವುದನ್ನು ಕಾಣಬಹುದಾಗಿದೆ.

ಹರಿಹರನ ಕೈಯಲ್ಲಿ ರಗಳೆಯು ನದಿಯಂತೆ, ಸುಳಿಯುತ್ತ ಮೊರೆಯುತ್ತ ಏಳುತ್ತ ಬೀಳುತ್ತ ಕನಲುತ್ತ ಕೊಬ್ಬುತ್ತ ಬಗೆ ಬಗೆಯ ಬೆಡಗಿನಿಂದ ಹರಿಯುತ್ತದೆ. ಅವನ ಸ್ಪೂರ್ತಿ ವಿಶೇಷವೂ ಭಕ್ತಿ ಪರವಶತೆಯೂ ಪ್ರತಿಭೆಯ ಸಂಚಾರವೂ ಅವನ ರಗಳೆಯನ್ನು ಇಚ್ಛೆ ಬಂದ ಹಾಗೆ ಕುಣಿಸುತ್ತದೆ ಎಂದು ವಿದ್ವಾಂಸರಾದ ಡಿ. ಎಲ್‌. ನರಸಿಂಹಾಚಾರ್‌ ಅವರು ಹರಿಹರನ ರಗಳೆಗಳ ವೈಭವವನ್ನು ಪ್ರಶಂಸಿಸಿದ್ದಾರೆ.

ಭಾವನೆಗಳ ತೀವ್ರ ಅಭಿವ್ಯಕ್ತಿಗೆ ರಗಳೆ ಅತ್ಯುತ್ತಮ ಛಂದೋಮಾರ್ಗ. ಹರಿಹರನ ಭಕ್ತಿಯ ಆವೇಶಗಳು ಓತಪ್ರೋತವಾಗಿ ಧುಮ್ಮಕ್ವಲು “ರಗಳೆ” ತುಂಬ ಸಮರ್ಥ ಸಂವಹನ ಮಾಧ್ಯಮವಾಯಿತು. ಹೀಗಾಗಿ ಹಳಗನ್ನಡ ಕಾವ್ಯದಲ್ಲಿ ಅಲ್ಲಲ್ಲಿ ಮಿಂಚಿಮರೆಯಾಗುತ್ತಿದ್ದ ರಗಳೆ ಹರಿಹರನಲ್ಲಿ ಸಮಗ್ರ ಕಾವ್ಯವಾಗಿ ಮೈದಳೆಯಿತು.

ಹರಿಹರನ ನ೦ತರ ರಗಳೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮತ್ತೆ ಮರು ಹುಟ್ಟುಪಡೆಯಿತು. ಆಧುನಿಕ ಕನ್ನಡ ಸಾಹಿತ್ಯದಲ್ಲಿ “ಸರಳರಗಳೆ’ – “ಮಹಾಛಂದಸ್ಸು’ ಎಂದು ಪ್ರಸಿದ್ಧಿ ಪಡೆದಿದೆ. ಪ್ರಾಸ ನಿಯಮಗಳನ್ನು ತೊರೆದ ಲಲಿತರಗಳೆ ಇಂಗ್ಲಿಷ್‌ ಸಾಹಿತ್ಯದಲ್ಲಿರುವ ‘ಬ್ಲ್ಯಾಂಕ್‌ವರ್ಸ್‌'(blank verse) ಮಾದರಿಯಲ್ಲಿ ಆಧುನಿಕ ಕನ್ನಡ ನಾಟಕಗಳಲ್ಲಿ “ಸರಳರಗಳೆ’ಯಾಗಿ ಮೂಡಿ ಬಂದಿದೆ. ಕುವೆಂಪು ಅವರ ನಾಟಕ “ಚಿತ್ರಾಂಗದಾ’ ಮತ್ತು ಅವರ ಮಹಾಕಾವ್ಯ “ಶ್ರೀರಾಮಾಯಣ ದರ್ಶನಂ’ದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಕೆಯಾಗಿದೆ.

ಹೊಸಗನ್ನಡ ಕಾವ್ಯದಲ್ಲೂ ಕುವೆಂಪು ಈ ಪದ್ಯಜಾತಿಯನ್ನು ಕೆಲವು ಬದಲಾವಣೆಯ ಮೂಲಕ “ಸರಳ ರಗಳೆ’ಯೆಂದು ಕರೆದು ಮಹಾಕಾವ್ಯ ರಚನೆಗೆ ಬಳಸಿಕೊಂಡಿದ್ದಾರೆ.

Spread the Knowledge

You may also like...

Leave a Reply

Your email address will not be published. Required fields are marked *